Sunday, February 19, 2012

ನಿರೀಕ್ಷೆ

ಇಂದೆಲ್ಲೋ
ಇರುವೆನು ನಾನು
ಯಾವುದೊ ಬೆಟ್ಟದ ಮೇಲೆ
ತೆರೆದಿರುವ
ಕಣ್ಣಲಿ ನೀನು
ನೋಡದೆ ಹೋದೆಯಾ ಗೆಳತಿ?
ಹಾದಿಯೊಳೇ
ದೊರಕಿದ ಸುಮವ
ಹೆಣೆಯುತಲಿರೆ ಹೊಸ ಮಾಲೆ,
ನಂದಿಸದೇ
ಉರಿಸೆಯಾ ನೀನು
ಬೆಳಗಿಸೆ ಬದುಕಿನ ಪ್ರಣತಿ.

ಆ ಮರಗಳ
ನೆಳಲಿಲ್ಲಿಲ್ಲ
ಈ ಗಿರಿಶಿಖರದ ಮೇಲೆ.
ಪಾತಾಳವೆ
ಕಾಣುತಲಿಹುದು
ಬೆಟ್ಟದ ಈ ಬದಿಯಲ್ಲಿ.
ಆ ಗಾಳಿಯ
ಸುಳಿವಿಲ್ಲವೆ ಇಲ್ಲ,
ನೀನಾತುಮವನೆ ಹೋಲೆ,
ಮುಳುಗಿಸುವೆಯೊ
ನೀ ತೇಲಿಸಿ ನಗುವೆಯೊ
ಬಾಳಿನ ತಿಳಿನದಿಯಲ್ಲಿ?


-ಅ
19.02.2012
12AM

Monday, December 5, 2011

ಭಾವಚಿತ್ರ

ಕಪ್ಪು ರೇಷಿಮೆ ಹೊದಿಕೆಯಂದದಿ 
ಉರುಳು ಹರಡಿರೆ ಬೆನ್ನಿಗೆ 
ಎಳೆಯು ಕಚಗುಳಿಯಿಡುತ ಕೊಡುತಿದೆ 
ನಲಿಯೆ ಮುತ್ತನು ಕೆನ್ನೆಗೆ. 

ನಗುವ ತುಟಿಗಳು ಬಿಗಿದು ಹೋಗಿವೆ 
ಎದೆಯ ದನಿಯನು ಅಡಗಿಸಿ 
ದನಿಯ ಮರೆಸುತ ಕಳೆಯ ಬಯಸಿದೆ 
ಪ್ರಿಯನ ತುಟಿಗಳ ಚುಂಬಿಸಿ. 

ಹೊಳೆವ ಚಂದಿರನನ್ನು ಮೀರಿಪ 
ಕಣ್ಣು ಕನಸನು ತೋರಿದೆ. 
ಅಲ್ಲೆ ತಾರೆಯ ಕಾಂತಿ ಪಸರಿಪ 
ಹಣೆಯ ಚುಕ್ಕಿಯು ಬೀರಿದೆ. 

ಹಿಮದಿ ಮಿಂದಿಹ ಮರದ ರೆಂಬೆಯು 
ಹೊಳೆವ ತೋಳ್ಗಳ ರೂಪದಿ. 
ಮುಳುಗಿಸಲು ತನ್ನಿನಿಯನಾತ್ಮವ 
ಮಿಡಿವ ವಕ್ಷದ ಕೂಪದಿ. 

-ಅ
12.04.2011 
1AM

Wednesday, November 16, 2011

ಆಶ್ರಯ

ಬಾಗಿಲು ಮುಚ್ಚಿದ ಗುಡಿಯಂಗಳದಲಿ
ಮಲಗಿದೆ ಬೀದಿಯ ನಾಯಿ.
ಮನೆಮನೆ ತಿರುತಿರುಗುತ ಬಳಲಿದೆಯೋ
ಮುಚ್ಚಿದೆ ತನ್ನಯ ಬಾಯಿ.

ಮಲಗಿದೆ ಹನುಮನ ಗುಡಿಯಂಗಳದಲಿ
ನಡುಗುತಲೇ ಚಳಿಯಲ್ಲಿ.
ಹನುಮನ ಕಾವರೆ ಕಲ್ಲಭಿಷೇಕವ
ಎರೆಯುವರಯ್ಯೋ ಇಲ್ಲಿ.

ಹೊತ್ತಿಗೆ ಹೊಟ್ಟೆಗೆ ಕೊಟ್ಟಿಹ ದೇವನು
ಮರೆತನು ಪ್ರೀತಿಯ ಕೈಯಿ.
ಅನ್ನವ ನೀಡುವರೆಲ್ಲರು "ಹಚ ಹಚ"
ಮುರಿವರು ಅಯ್ಯೋ ಮೈಯಿ.

ಪ್ರೀತಿಯ ಕೈಯದು - ನಾಯಿಯ ಸೋಕದು
ಸೋಕಿರೆ ಪೂಜೆಯೆ ಹಾಳು.
ಪೂಜೆಯ ಪಡೆಯುವ ದೇವನು ಮೌನದಿ
ಉದ್ಧರಿಸುತನಿಹ ಬಾಳು.

ನೋವನು ತಾಳದೆ, ಶಪಿಸದೆ, ಕುಪಿಸದೆ,
ಹೊರಟಿತು ಬೀದಿಯ ನಾಯಿ.
"ಅನ್ನವ ಕೊಟ್ಟವರಿವರನು ಪೊರೆ ನೀನ್"
ಎಂದಿತು ಮುಚ್ಚುತ ಬಾಯಿ.

-ಅ
15.11.2011
8.30PM

Thursday, September 8, 2011

ಚಾರಣದ ಬದುಕು

ಮರಗಿಡವೆಲ್ಲವು ಕನವರಿಸುತ್ತ
ಹಾಡಿನವೊಲು ಇದು ಗಾಳಿಯ ಸದ್ದೆ?
ಮುಗಿಲಿನ ದಿಂಬಿಗೆ ತಲೆಯನಿಡುತ್ತ
ಪರ್ವತಕೇನೀ ಇರುಳಲಿ ನಿದ್ದೆ?

ಮುಗಿಲೆಲ್ಲವು ಕಪ್ಪಾಗುತ ಕೂಡಿ
ನುಂಗಿವೆ ಚುಕ್ಕಿಗಳ ಸ್ವಾತಂತ್ರ್ಯ.
ಮಿಂಚಿನ ಪೌರೋಹಿತ್ಯದ ತಂತ್ರ,
ಗುಡುಗಿನ ರೂಪದಿ ಹೊರಟಿತು ಮಂತ್ರ.

ನೀರವದರಣ್ಯ ಮೀರಿರೆ ಮೇರೆ
ಎಚ್ಚರಗೊಳಿಸಿತು ವರ್ಷದ ಸೊಲ್ಲು.
ಹನಿ ತಾನ್ ತೊರೆಯಾಗುತೆ ಇಳಿಜಾರೆ
ಸಲಿಲತರಂಗವ ಮೀಟಿತು ಕಲ್ಲು.

ಹೆಜ್ಜೆಯ ನೆಲಸ್ಪರ್ಶಕೆ ಕಾಯುತ್ತ
ಜಿಗಣೆಗಳೋ ಹೀರಿವೆ ಮೈರಕ್ತ.
ಪುಷ್ಪದ ಗಿರಿ ಕೋಮಲತೆಯ ಚಿತ್ತ
ಪಡೆಯುವುದೇ ಇಹ ಜೀವನ್ಮುಕ್ತ.

ಬೆಳೆಬೆಳೆಯುತ್ತಲಿದೆ ಮಳೆಯ ದರ್ಪ;
ಅಧಿಕಾರದೊಳೇ ಮೆರೆದಿದೆ ಇಲ್ಲಿ.
ಹೆಡೆಯೆತ್ತಿದೆ ಕಗ್ಗತ್ತಲ ಸರ್ಪ,
ಮಿಂಚಿನವೊಲು ಕಿರು ಬೆಳಕನು ಚೆಲ್ಲಿ.

ನಡೆನಡೆವುದೆ ಬದುಕಿನ ಸನ್ಮಾರ್ಗ,
ಸೃಷ್ಟಿಯೊಳೆಲ್ಲವು ಸುಂದರ ಸ್ವರ್ಗ.
ಹಗಲೇನಿರುಳೇನೀ ಚಾರಣದಿ?
ಸೌಂದರ್ಯವೆ ಎಲ್ಲವು ಈ ಬನದಿ.

-ಅ
23.11.2010
9 AM

Saturday, August 27, 2011

ಯೆಡಿಯೂರು ಕೆರೆ

ಸಜ್ಜಾಗುತ್ತಿದೆ ಗಣೇಶೋತ್ಸವಕ್ಕೆ.
ಎತ್ತೆತ್ತೆತ್ತರದ,
ವರ್ಣರಂಜಿತ,
ವಿವಿಧ ಭಂಗಿಯ
ಗಣಾಧಿಪನ ಸಂಚಯನಕ್ಕೆ - ಅಲ್ಲಲ್ಲ,
ವಿಸರ್ಜನೆಗೆ.

ಊರುದ್ದಕ್ಕೂ ಮೈ ಚೆಲ್ಲಿ,
ಬಿಸಿಲಲ್ಲಿ ತನ್ನ ಮೈ ಒಣಗಿಸಿಕೊಂಡಿದ್ದಾಗ
ಊರಿಗೆ ಊರೇ ತಂಪು.
ವಿಶಾಲ ಹೃದಯಿ, ತನ್ನೆದೆಯ ಮೇಲೆ ಬಂದು ನಿಂತ
ಸೌಧಗಳ ಪೊರೆಯುತ್ತಿದೆ - ದೇವರಂತೆ.

ಪೊರೆಯುವುದೇ ದೇವರ ಗುಣ.
ದೇಶದೇಶ ದಾಟಿ ಹಾರಿ ಬರುವ ಹೂಗಳೋ,
ಅಲ್ಲೆ ಭವಿಸಿ ಅದನೆ ನುಂಗುವ ಕಳೆಗಳೋ,
ಪೊರೆಯುವುದೇ ದೇವರ ಗುಣ.
ಅದಕ್ಕೇ ನಿತ್ಯ ಮುಂಜಾನೆ ಭಕ್ತಾದಿಗಳ
ಪ್ರದಕ್ಷಿಣೆ.

ಸಜ್ಜಾಗುತ್ತಿದೆ ಗಣೇಶ ವಿಷ ನೈವೇದ್ಯಕ್ಕೆ.
ಯಾವ ಅಮೃತವ ಕೊಡಲು?

-ಅ
27.08.2011
9PM